PANJANDHAYA BANTA VAIDYANATHA

KORAGATHANIYA DAIVADA AADISTHALA

ಕೊರಗತನಿಯ ದೈವದ (ಕೊರಗಜ್ಜನ) ಏಳು ಆದಿಸ್ಥಳಗಳು
ಈ ಏಳು ಆದಿಸ್ಥಳಗಳ ಮೂಲದೈವಗಳಾದ ಸಿರಿಗಳಿಗೆ ಬೇರೆ ಜಾಗವನ್ನು ಕೊಟ್ಟು ಈ ಜಾಗವನ್ನು ಕೊರಗತನಿಯನಿಗೆ (ಕೊರಗಜ್ಜನಿಗೆ) ಪಂಜಂದಾಯ ದೈವವು ನೀಡಿತು. ಆದ್ದರಿಂದ ಕೊರಗತನಿಯನಿಗೆ (ಕೊರಗಜ್ಜನಿಗೆ) ಕೋಲ ನಡೆಯುವ ಸಂದರ್ಭದಲ್ಲಿ ಈ ದೈವಗಳಿಗೆ ಮೊದಲ ಪ್ರಾಧಾನ್ಯತೆ ನೀಡಲಾಗುತ್ತದೆ (ಪ್ರಥಮ ಸೇವೆ),
ಸಿರಿಗಳಿಗೆ ‘ಏನ್ಮಮಂದೆ ಪಿದಾಯಿಯಾಯಿನಕುಲು’ ಮತ್ತು ‘ಮೆರರ್ ದೈವಗಳು’ ಎಂದು ಕರೆಯುತ್ತಾರೆ. (ಇಬ್ಬರು ಅಣ್ಣಂದಿರು, ಇಬ್ಬರು ತಮ್ಮಂದಿರು, ಒಂದು ಅಕ್ಕ ಮದಿಮಾಲ್ ಮತ್ತು ಸಂಕೊಲೆಗುಳಿಗ, ಸುಣ್ಣಲಾಯಿ ಹಾಗೂ ಪಿಲಿಭೂತ). ಅನಾದಿಕಾಲದಲ್ಲಿ ಈ ಎಲ್ಲಾ ದೈವಗಳು ಇಂದಿನ ಕೊರಗತನಿಯ (ಕೊರಗಜ್ಜ) ದೈವದ ಏಳು ಆದಿಸ್ಥಳಗಳಲ್ಲಿ ವಿರಾಜಮಾನವಾಗಿದ್ದವು. ಪಂಜಂದಾಯ ದೈವವು ಈ ದೈವಗಳಿಗೆ ಬೇರೆ ಸ್ಥಳಗಳನ್ನು ನೀಡಿತು. ಈ ಜಾಗವು ದೊರೆಯುವ ಮೊದಲು ಕದ್ರಿಯ ದೇವಸ್ಥಾನದಲ್ಲಿ ಮಾಯವಾದ ಕೊರಗತನಿಯನು (ಕೊರಗಜ್ಜನು) ಮಾಯಾ ರೂಪದಲ್ಲಿ ಸಂಚಾರ ಮಾಡಿಕೊಂಡಿದ್ದನು.
ಹಿರಿಯ ತಲೆಮಾರಿನವರು ಹೇಳಿಕೊಂಡು ಬಂದ ಹಾಗೆ ಸುಮಾರು 800 ವರ್ಷಗಳ ಇತಿಹಾಸವಿರುವ ಶ್ರೀ ಪಂಜಂದಾಯ, ಬಂಟ, ವೈದ್ಯನಾಥ ಮತ್ತು ಶ್ರೀ ಕೊರಗತನಿಯ ದೈವಗಳ ನೇಮ-ನಿಯಮ, ಜಾತ್ರೆ-ಕೋಲಗಳು, ಮುನ್ನೂರು ಗ್ರಾಮದ ತಂತ್ರಿಗಳ ಮಾರ್ಗದರ್ಶನದಲ್ಲಿ, ಮಾಗಣತ್ತಡಿ ಮನೆತನದವರ ಅನುವಂಶಿಕ ಆಡಳಿತದಲ್ಲಿ ಮತ್ತು ಮೂರು ಗುತ್ತುಗಳಾದ ಕುತ್ತಾರು ಗುತ್ತು, ಕಲ್ಲಾಲ ಗುತ್ತು, ಬೊಲ್ಯ ಗುತ್ತು ಹಾಗೂ ಗೇಣಿಮನೆ ಮನೆ ಬಾಳಿಕೆಯವರ ಮುಂದಾಳತ್ವದಲ್ಲಿ ಜೊತೆಗೆ ನೂರಾರು ಸೇವಚಾಕರಿಯವರ ನಿಸ್ವಾರ್ಥಸೇವೆಯೊಂದಿಗೆ ಪರಂಪರೆಯಿಂದ ನಡೆದುಕೊಂಡು ಬಂದಿರುವ ಕಟ್ಟುಕಟ್ಟಲೆಗೆ ಚ್ಯುತಿಬಾರದಂತೆ ಈಗಲೂ ನಡೆದುಕೊಂಡು ಬಂದಿರುತ್ತದೆ.
ಮಾಗಣತ್ತಡಿ ಮನೆತನದವರನ್ನು ಶ್ರೀ ಪಂಜಂದಾಯ ಹಾಗೂ ಕೊರಗತನಿಯ ದೈವವು ‘ಕಲ್ಲಾಲಗುತ್ತು ಎಂದು ಸಂಬೋಧಿಸುತ್ತದೆ. ಶ್ರೀ ಪಂಜಂದಾಯ ಬಂಟ ಕೊರಗ ತನಿಯ ದೈವದ ಆಭರಣ ಹಾಗೂ ಶ್ರೀ ಕೊರಗತನಿಯ ದೈವದ ಭಂಡಾರ (ದಂಟೆ, ಮುಟ್ಟಾಳೆ) ಮಾಗಣತ್ತಡಿ ಮನೆಯಲ್ಲಿಯೇ ಇರುವುದು ಕಟ್ಟಳೆಯಾಗಿದೆ.

ಕೊರಗ ತನಿಯನ (ಕೊರಗಜ್ಜನ) ಏಳು ಆದಿಸ್ಥಳಗಳಲ್ಲಿ ಯಾವುದೇ ರೀತಿಯ ಗುಡಿಗೋಪುರಗಳು, ಮೂರ್ತಿ ಆರಾಧನೆಗಳು, ದೀಪಧೂಪ ಇಂತಹ ಆರಾಧನೆಗಳಿಗೆ ಆಸ್ಪದವಿಲ್ಲ. ಇದು ಅನಾದಿಕಾಲದಿಂದ ನಡೆದುಕೊಂಡು ಬಂದ ಸಂಪ್ರದಾಯ.